ಗುರುವು ಕಣ್ತೆರೆದ ಘಳಿಗೆ
ಗುರುವು ಕಣ್ತೆರೆದ ಘಳಿಗೆ
ಅನಂತ ಭೂಮಿ ಆಕಾಶಕ್ಕೆ ಸಂಚಲನೆ
ಅರಿವಿನ ಹರಿವು ಒಳಗೆಲ್ಲ ಬೆಳಕು, ಆವಾಹಿ...
ಗವಾಯಿ ಸತ್ ಚಿತ್ ಪ್ರಭೆಯಲ್ಲಿ
ಅಂಧತ್ವಕ್ಕೆ ಆನಂದ ಭಾಷ್ಪ.
ಓ ಪರಮ ವಿರಾಗಿ,
ಒಮ್ಮೆ ನುಸುಳಿ ಬಿಡು ಅಂತರಾಳಕ್ಕೆ
ಸಂಬಂಧಗಳ ಬಿರುಕು ಬಿಟ್ಟ
ಬೆಟ್ಟ ಗುಡ್ಡಗಳ ಗವಿ ಕಂದರಕ್ಕೆ
ಮಾನವತ್ವದ ಹೂವು ಕಮರಿ ಹೋಗುವ ಮುನ್ನ
ನಿರಾಧಾರ ಬದುಕಿಗೆ ಒಂದಿಷ್ಟು ದಾರಿ ತೋರಿಬಿಡು.
ಹರಿಸು ಗಾನದ ಸುಧೆಯ
ದಶ ದಿಕ್ಕಲೂ ಮೊಳಗುವ ನಿನ್ನ
ದಶವಾದ್ಯ - ರುದ್ರವೀಣೆಯ ಸ್ವರ ಸ್ವರದ ಸರಿಗಮವ
ಒಕ್ಕೂರಲ ಉದ್ಘೋಷವಾಗಿ ಬರುವಂತೆ ಹರಸು ಹೇ ನಾದ ದಾಸೋಹಿ.
ಪುಟ್ಟ ರಾಜ ಹೆಜ್ಜೆಯಲಿ ಅಸಮಾನತೆಯ
ಗುಡಿ ಗೋಪುರಗಳ ಹೊಸಕಿಬಿಡು
ಇನ್ನಿಲ್ಲದಂತೆ ನೆಲ ಕಚ್ಚಬೇಕು ಅಪಮಾನ, ಕೀಳರಿಮೆ.
ಜಂಗಮತ್ವಕ್ಕೆ ಜೋಳಿಗೆ ಹಿಡಿದು ಹಿಂತಿರುಗದೆ ಹೊರಟ
ಬಯಲ ಭಿಕ್ಷು,
ಬರಿ ಬೇಗುದಿಯ ಬೇಳೆ ಕಾಳುಗಳ
ನಿನ್ನೊಂದಿಗೇ ಹೊತ್ತು, ಸೂರ್ಯ ಶಿಖರದ ಕಡೆಗೆ ನಡೆದು ಬಿಟ್ಟೆ,
ಅನಾಥವಾಗಿಸಿ ಈ ಬಾಳ ಬಟ್ಟೆ.
ಹುಟ್ಟಿ ಬಾ ಇನ್ನೊಮ್ಮೆ ಸಮಾಧಿಯೊಳಗಿಂದ
ಕಾಯುತಿದೆ ನಿನಗೆ ಕಾಲ
ಸಹಸ್ರ ಸಹಸ್ರ ಸುವರ್ಣ ತುಲಾಭಾರ ಹೊತ್ತು.
_ಡಾ. ಶುಭಾ, ಮರವಂತೆ